
ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ವತಿಯಿಂದ ಯುವ ವೇದಿಕೆಯ ನೇತೃತ್ವದಲ್ಲಿ ರಕ್ತದಾನ ಶಿಬಿರವು ಮುಲ್ಕಿಯ ದೇವಾಡಿಗ ಸಭಾಭವನದಲ್ಲಿ ದಿನಾಂಕ 02-03-2025ನೆಯ ಆದಿತ್ಯವಾರ ಪೂರ್ವಾಹ್ಣ 9:30 ಗಂಟೆಯಿಂದ ಜರುಗಿತು.

ಮಹಾಸಭಾ ಅಧ್ಯಕ್ಷರಾದ ರವಿ ಶೆಟ್ಟಿಗಾರ್, ಕಾರ್ಕಳರವರು ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಕ್ತದಾನವು ಪ್ರಾಣರಕ್ಷಣೆಯ ಉದಾತ್ತ ಉದ್ದೇಶವನ್ನು ಹೊಂದಿದ್ದು ಶಿಬಿರಗಳನ್ನು ನಿರಂತರವಾಗಿ ನಡೆಸುತ್ತಿರಬೇಕೆಂದು ಅಭಿಪ್ರಾಯಪಟ್ಟರು. ಮುಲ್ಕಿಯಲ್ಲಿ ಮುಂದಿನ ವರ್ಷದ ಕ್ರೀಡೋತ್ಸವ ಜರುಗಲಿದ್ದು ಈ ಕುರಿತಾಗಿಯೂ ಯುವ ವೇದಿಕೆಯ ಕಾರ್ಯಕರ್ತರು ಚಿಂತನ ಶೀಲರಾಗಬೇಕೆಂದು ಕರೆ ನೀಡಿದರು. ಪೂರ್ವಾಧ್ಯಕ್ಷರಾದ ಪುರಂದರ ಡಿ ಶೆಟ್ಟಿಗಾರ್ ಕಿನ್ನಿಗೋಳಿಯವರು ಮಾತನಾಡಿ ಮುಲ್ಕಿ ದೇವಸ್ಥಾನದ ಆತಿಥ್ಯದಲ್ಲಿ ನಡೆಯುವ ಕ್ರೀಡೋತ್ಸವಕ್ಕೆ ಎಲ್ಲರ ಸಹಕಾರವನ್ನು ಕೋರುತ್ತ ರಕ್ತದಾನ ಶಿಬಿರವು ಯಶಸ್ವಿಯಾಗಲೆಂದು ಹಾರೈಸಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಕೊಡಿಯಾಲ್ ಬೈಲ್ ರವರು ಮಾತನಾಡಿ ರಕ್ತದಾನ ಶಿಬಿರದಂತಹ ಸತ್ಕಾರ್ಯದಿಂದ ಮಹಾಸಭಾದ ಕೀರ್ತಿವರ್ಧನೆಯಾಗಲೆಂದು .ಹಾರೈಸಿದರು. ದೇವಾಡಿಗಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗರು ಮಾತನಾಡುತ್ತ ಪದ್ಮಶಾಲಿ ಸಮಾಜದವರು ಕೈಗೊಂಡ ಪುಣ್ಯಕಾರ್ಯಕ್ಕಾಗಿ ಅಭಿನಂದಿಸಿದರು. ರಕ್ತದಾನ ಶಿಬಿರದ ತಾಂತ್ರಿಕ ತಜ್ಞರಾದ ಕೆಎಂಸಿ ಆಸ್ಪತ್ರೆಯ ಶ್ರೀ ಪ್ರಜ್ವಲ್ ರವರು ಮಾತನಾಡಿ ರಕ್ತದಾನ ಮಾಡಲು ಇರಬೇಕಾದ ಅರ್ಹತೆಯ ಬಗ್ಗೆ ತಿಳಿಸಿದರು. ರಕ್ತದಾನ ಶಿಬಿರವನ್ನು ಆಯೋಜಿಸಿದ ಭಾವನ್ನು ಅಭಿನಂದಿಸುತ್ತ ತತ್ಸಂಬಂಧಿ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.

ಮಹಾಸಭಾ ಉಪಾಧ್ಯಕ್ಷರಾದ ರತ್ನಾಕರ ಇಂದ್ರಾಳಿಯವರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತ ಶರೀರವು ಪರೋಪಕಾರಕ್ಕಾಗಿ ಉಪಯೋಗವಾಗಬೇಕೆಂದು ತಿಳಿಸಿ ಮಹಾಸಭಾದ ಉಪಕ್ರಮವನ್ನು ಶ್ಲಾಘನೆ ಮಾಡಿದರು. ಮಹಾಸಭಾದ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟ್ರಾಯ ಶೆಟ್ಟಿಗಾರ್, ಉಮೇಶ್ ಮಾರ್ಪಳ್ಳಿ, ಸುಧಾಕರ ಶೆಟ್ಟಿಗಾರ್ ಸಾಲಿಕೇರಿ, ವಿಠಲ ಶೆಟ್ಟಿಗಾರ್ ಸಗ್ರಿ, ಜಯರಾಮ್ ಮಣಿಪಾಲ್, ರಜನೀಕಾಂತ ಶೆಟ್ಟಿಗಾರ್ ಸಾಲಿಕೇರಿ ಉಪಸ್ಥಿತರಿದ್ದರು.

ಯುವ ವೇದಿಕೆಯ ಸಂಚಾಲಕರಾದ ಹರೀಶ್ ಶೆಟ್ಟಿಗಾರ್ ಮುಲ್ಕಿ ಪ್ರಸ್ತಾವಿಸಿ ಸ್ವಾಗತಿಸಿದರು. ದೀಪಕ್ ಕುಮಾರ್ ಧನ್ಯವಾದ ಸಮರ್ಪಿಸಿದರು. ಸುಮಾರು 80 ಜನರು ರುಧಿರದಾನದಿಂದ ಧನ್ಯರಾದರು.