![]()
ಆತ್ಮೀಯರೇ ,
ಮಾರ್ಚ್ 9 -2025 ರಂದು ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ( ರಿ.) ಇದರ ಅಂಗ ಸಂಸ್ಥೆ ಮಹಿಳಾ ವೇದಿಕೆಯ ವತಿಯಿಂದ ನಡೆಸಲಾದ ಮಹಿಳಾ ದಿನಾಚರಣೆ ‘ ಚೈತನ್ಯ’ ಒಂದು ಅದ್ಭುತ ಕಾರ್ಯಕ್ರಮವೆಂದು ಸರ್ವರ ಪ್ರಶಂಸೆಗೆ ಪಾತ್ರವಾಗಿದ್ದು ಬಹಳ ಸಂತೋಷದ ವಿಚಾರ. ಇದು ನಮ್ಮ ಮಹಿಳೆಯರ ಉತ್ಸಾಹ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಹೊಸತನದೊಂದಿಗೆ ಯಾವುದೇ ಸದ್ದುಗದ್ದಲವಿಲ್ಲದೆ ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವುದೆಂಬ ಪೂರ್ಣ ವಿಶ್ವಾಸ ಇತ್ತು. ಆದರೆ ನಾವು ಊಹಿಸದ ಮಟ್ಟದಲ್ಲಿ ಶ್ಲಾಘನೆ ಹರಿದು ಬಂದಿದ್ದು ನಮ್ಮನ್ನು ಮೂಕರನ್ನಾಗಿಸಿದೆ. ಕರಾವಳಿಯ ಮೂರು ಜಿಲ್ಲೆಯ ಶೆಟ್ಟಿಗಾರ ಮಹಿಳೆಯರಿಂದ ದೊರೆತ ಪ್ರೋತ್ಸಾಹ ಇದಕ್ಕೆ ಕಾರಣ. ಸಮಾನ ಮನಸ್ಕರು ಹಮ್ಮಿಕೊಂಡ ಸರಳ ಸುಂದರ ಕಾರ್ಯಕ್ರಮವಾಗಿತ್ತು ‘ ಚೈತನ್ಯ’. ಎಲ್ಲರೊಳಗಿದ್ದ ಪ್ರೀತಿ ,ಪರಸ್ಪರ ಗೌರವ ಇದಕ್ಕೆ ಕಾರಣ. ನಾನು ಎಂಬುವ ಅಹಮಿಕೆಯಿಲ್ಲದೆ ನಾವು ಎಂದು ಜೊತೆಗೂಡಿದ ಶೆಟ್ಟಿಗಾರ ಮಹಿಳೆಯರ ಕಾರ್ಯಕ್ರಮವಾಗಿತ್ತು ‘ ಚೈತನ್ಯ’ . ಉಡುಪಿಯ ಶ್ರೀ ವೀರಭದ್ರ ಶ್ರೀ ಶಾಂತದುರ್ಗಾ ಶ್ರೀ ಮಹಾಗಣಪತಿ ದೇಗುಲದ ಸಭಾಂಗಣದಲ್ಲಿ ನಡೆಯಲ್ಪಟ್ಟ ಸುಂದರ ಮನಸ್ಸುಗಳ ಸಮ್ಮಿಲನ ಇದು.

ಅಧ್ಯಕ್ಷರಾಗಿ ವೇದಿಕೆಯಲ್ಲಿ ಬಸ್ರೂರಿನ ಮಾಜಿ ಯೋಧರಾದ ಕೀರ್ತಿಶೇಷ ಮಹಾಬಲ ಶೆಟ್ಟಿಗಾರರ ಧರ್ಮಪತ್ನಿ ಶಾಂತ ಮಹಾಬಲ ಶೆಟ್ಟಿಗಾರರು ಉಪಸ್ಥಿತರಿದ್ದರೆ ಅಕ್ಕ ಪಕ್ಕದಲ್ಲಿ ವೈದ್ಯಲೋಕದ ಕಣ್ಮಣಿ ನಮ್ಮೆಲ್ಲರ ಮೆಚ್ಚಿನ ಡಾ. ವಸುಧಾ ಮತ್ತು ಸಾಹಿತ್ಯ ಲೋಕದ ದಿಗ್ಗಜೆ ಡಾ. ಮೀನಾಕ್ಷಿ ರಾಮಚಂದ್ರರು ರಾಜಿಸಿದ್ದರು. ಉಡುಪಿಯ ಶ್ರೀಮತಿ ನಯನಾರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಈ ಕಾರ್ಯಕ್ರಮದ ಆರಂಭ. ಸರ್ವರ ಸ್ವಾಗತಗೈದವರು ಕಾರ್ಕಳದ ಶ್ರೀಮತಿ ಪ್ರಭಾಕಿಶೋರ್. ಮಹಿಳಾ ವೇದಿಕೆಯ ಸಂಚಾಲಕಿ ಶ್ರೀಮತಿ ಶೋಭಾ ಹರಿಪ್ರಸಾದ್ ಪ್ರಾಸ್ತಾವಿಕ ನುಡಿಯಾಡಿದರು.
ಉದ್ಘಾಟನೆಯ ಹೊತ್ತಿನಲ್ಲಿ ಕಿನ್ನಿಮುಲ್ಕಿ ದೇಗುಲದ ಮುಖ್ಯರಾದ ಶ್ರೀ ಪ್ರಭಾ ಶಂಕರ್ ಪದ್ಮಶಾಲಿ , ನಮ್ಮ ಪದ್ಮಶಾಲಿ ಮಹಾಸಭಾದ ಅಧ್ಯಕ್ಷರಾದ ಶ್ರೀ ರವಿ ಶೆಟ್ಟಿಗಾರ್ , ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ವೆಂಕಟ್ರಾಯರು ,ಉಪಾಧ್ಯಕ್ಷೆ ಶ್ರೀಮತಿ ಇಂದಿರಾ ಮತ್ತಿತರರು ವೇದಿಕೆಯ ಮೆರುಗು ಹೆಚ್ಚಿಸಿದರು.
ಹಿರಿಯ ಮಾತೆಯರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಿದ್ದು ಕಾರ್ಯಕ್ರಮದ ಮುಖ್ಯ ಭಾಗವಾಗಿತ್ತು. ಶ್ರೀಮತಿ ಸಾವಿತ್ರಿ ನಾರಾಯಣ ಶೆಟ್ಟಿಗಾರ್ ಸುರತ್ಕಲ್, ಶ್ರೀಮತಿ ಚಂದ್ರಾವತಿ ಸದಾಶಿವ ಶೆಟ್ಟಿಗಾರ್ ಬ್ರಹ್ಮಾವರ , ಶ್ರೀಮತಿ ಚಂದ್ರಾವತಿ ಶೆಟ್ಟಿಗಾರ್ ಹೆರ್ಗ ,ಶ್ರೀಮತಿ ಸರಸ್ಪತಿ ಶೆಟ್ಟಿಗಾರ್ ಮಂಜೇಶ್ವರ , ಶ್ರೀಮತಿ ಶಾರದಾ ಪುರುಷೋತ್ತಮ ಶೆಟ್ಟಿಗಾರ್ ಕಾಟಿಪಳ್ಳ , ಶ್ರೀಮತಿ ನೀರಜಾ ಸುಧಾಕರ ಶೆಟ್ಟಿಗಾರ್ ಪರ್ಕಳ ಇವರನ್ನು ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಶ್ರೀಮತಿ ಚಂದ್ರಾವತಿ ಬ್ರಹ್ಮಾವರ , ಶ್ರೀಮತಿ ನೀರಜಾ ಸುಧಾಕರ ಶೆಟ್ಟಿಗಾರ್ ತಮ್ಮ ಸಂತಸ ವ್ಯಕ್ತಪಡಿಸಿದರು. ಉಳ್ಳಾಲದ ಶ್ರೀಮತಿ ಲತಾ ಸಂತೋಷ್ ಸನ್ಮಾನ ಪತ್ರ ಓದಿದರು

ಸಂಪನ್ಮೂಲ ವ್ಯಕ್ತಿಗಳಿಂದ ದೊರೆತ ಉಪನ್ಯಾಸ
ಬಹುಶಃ ಎಂದೆಂದೂ ಮರೆಯಲಾಗದ ಉಪಯುಕ್ತ ಸಲಹೆಗಳ ಹೂರಣ. ಡಾ. ವಸುಧಾ ಅವರು ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕುರಿತಾಗಿ ನೀಡಿದ ಎಂಟು ಸೂತ್ರಗಳನ್ನು ಆಲಿಸಿದ ನಮ್ಮ ಮಹಿಳೆಯರ ಮೊಗದಲ್ಲಿ ಕಂಡಿದ್ದು ಸಂತೃಪ್ತಿಯ ನಗು. ಮಧುರ ಕಂಠದ , ಸರಳ ವ್ಯಕ್ತಿತ್ವದ ,ಅಪಾರ ಜ್ಞಾನ ಭಂಡಾರದ ಡಾ. ವಸುಧಾರವರು ನಮ್ಮ ಪದ್ಮಶಾಲಿ ಸಮಾಜದ ಅಮೂಲ್ಯ ಮುತ್ತೆಂದು ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.


ಸ್ವಾವಲಂಬಿ ಮಹಿಳೆ ಎಂಬ ವಿಚಾರದಲ್ಲಿ ಡಾಕ್ಟರ್ ಮೀನಾಕ್ಷಿ ರಾಮಚಂದ್ರರವರು ನೀಡಿದ ಉಪನ್ಯಾಸ ನಮ್ಮ ಮಹಿಳೆಯರಲ್ಲಿ ನಾವೂ ಏನಾದರೂ ಸಾಧನೆಯನ್ನು ಮಾಡಬೇಕು ಎಂಬ ಹೊಸ ಚಿಂತನೆಯನ್ನು ಹುಟ್ಟು ಹಾಕಿದ್ದು ಮರೆಯುವಂತಿಲ್ಲ. ಲಘು ಹಾಸ್ಯದ ಮೂಲಕ ಮನಸೂರೆಗೊಳ್ಳುವ ನುಡಿತೇರನ್ನು ಸುಲಲಿತವಾಗಿ ನಡೆಸಿದರು ಡಾ. ಮೀನಾಕ್ಷಿಯವರು.
ಸಂಪನ್ಮೂಲ ವ್ಯಕ್ತಿಗಳನ್ನು ಮಹಿಳಾ ವೇದಿಕೆಯ ವತಿಯಿಂದ ಗೌರವಿಸಲಾಯಿತು.


ವೈವಿಧ್ಯಮಯ ಸಾಂಸ್ಕೃತಿಕ ಮನೋರಂಜನಾ ಚಟುವಟಿಕೆಗಳು ಒಂದರೊಡನ್ನೊಂದು ಸ್ಪರ್ಧೆಗಿಳಿದಂತೆ ಕಂಡು ಬಂದವು. ಅಷ್ಟೊಂದು
ಆಕರ್ಷಕವಾಗಿದ್ದವು. ಸಮೂಹ ನೃತ್ಯಗಳು , ಭಜನೆ , ಏಕಪಾತ್ರಾಭಿನಯ , ಸಾಂಪ್ರದಾಯಿಕ ಸಿನಿಮಾ ನೃತ್ಯ , ಭರತನಾಟ್ಯ , ಕಿರುಪ್ರಹಸನ ,
ಇತ್ಯಾದಿ. ‘ಸಂಸಾರ ಸರಿಗಮ’ – ಗಮ್ಮತ್ತು ಮಾತುಕತೆಯಲ್ಲಿ ನಮ್ಮ ಸಮಾಜದ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ಪರಿಣಯದ ಬಗ್ಗೆಯೂ ಕಳಕಳಿ ವ್ಯಕ್ತ ಪಡಿಸಲಾಯಿತು. ಮುಂದಿನ ದಿನಗಳಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನ ಸಾಗಲಿದೆ. ಬಹಳ ಸಂಭ್ರಮದಿಂದ ಪಾಲ್ಗೊಂಡ ಸರ್ವರಿಗೂ ಅಭಿನಂದನಾ ಪತ್ರಗಳನ್ನು ಪ್ರಮುಖರ ಸಮ್ಮುಖದಲ್ಲಿ ವಿತರಿಸಲಾಯಿತು. ಶ್ರೀಮತಿ ಶೈಲಜಾ ಸುಧಾಕರ ಧನ್ಯವಾದ ಸಮರ್ಪಿಸಿದರು.

ಶ್ರೀಮತಿ ಮಾಯಾ ಗಿರೀಶ್ ವಿಟ್ಲ ಅವರು ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಿ ಅದ್ಭುತವೆಂದು ಬಣ್ಣಿಸಿದ್ದು ಮಹಿಳೆಯರ ಪ್ರಯತ್ನದ ಸಫಲತೆಗೆ ಸಾಕ್ಷಿಯಾಗಿತ್ತು. ಶ್ರೀಮತಿ ಮಾಲತಿಯವರ ಸಾರಥ್ಯದ ನಿರೂಪಣೆ , ಶ್ರೀಮತಿ ಸುನೀತಾ , ಹಿರಿಯರ ಮಾತೆಯರ ಪ್ರೋತ್ಸಾಹ , ಕಿರಿಯ ಯುವತಿಯರ – ಮಹಿಳೆಯರ ಸಹಕಾರ -ಸಮಯಕ್ಕೆ ಸರಿಯಾಗಿ ಒದಗಿ ಬಂದ ನೆರವು ಈ ಕಾರ್ಯಕ್ರಮದ ಸಂಪೂರ್ಣ ಸಫಲತೆಗೆ
ಕಾರಣವಾಯಿತು. ಕಿನ್ನಿಮೂಲ್ಕಿ ದೇಗುಲದ ಆಡಳಿತ ಮಂಡಳಿಯವರು ನೀಡಿದ ಸಹಾಯ ಮರೆಯುವಂತಿಲ್ಲ. ಅವಿರತ ದುಡಿದ ಶ್ರೀ ಗೋವರ್ಧನ ಅವರನ್ನು ಗೌರವಿಸಲಾಯಿತು.



ಭೋಜನ ವ್ಯವಸ್ಥೆಗೈದ ಶ್ರೀಮತಿ ಕಿಶೋರಿಯವರನ್ನು ನೆನೆಯಲಾಯಿತು. ಕಾರ್ಯಕ್ರಮಕ್ಕೆ ಬಂದಿದ್ದ ಅವರ ಪತಿ ಶ್ರೀ ಮಾಧವ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ವಿದ್ಯಾವರ್ಧಕ ಸಂಘ ,ಧಾರ್ಮಿಕ ವೇದಿಕೆ , ಕ್ರೀಡಾ ವೇದಿಕೆ , ಯುವ ವೇದಿಕೆಯನ್ನು ಸ್ಮರಿಸಲಾಯಿತು. ಮಹಾಸಭಾದ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಸಹಕಾರವಿಲ್ಲದೆ ಈ ಕಾರ್ಯಕ್ರಮ ನಡೆಯಲು ಸಾಧ್ಯವೇ ? ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು
ಶ್ರೀಮತಿ ಶೋಭಾ ಹರಿಪ್ರಸಾದ ಉಡುಪಿ ಮತ್ತು ಮಹಿಳಾ ಸೋದರಿಯರು
(ದ.ಕ.ಜಿಲ್ಲಾ ಪದ್ಮಶಾಲಿ ಮಹಿಳಾ ವೇದಿಕೆ)

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರಿಂದ ವಾಟ್ಸಪ್ ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅದನ್ನು ಕೂಡ ಪ್ರಕಟಿಸಿ.