![]()
ಚಿಕ್ಕವರಿದ್ದಾಗ ಪ್ರಾತಃ ವಿಧಿಗಳು ಮುಗಿದ ಬಳಿಕ ಹತ್ತಿರದಲ್ಲಿದ್ದ ದೇಗುಲಕ್ಕೆ ಹೋಗುವುದು ರೂಢಿಯಾಗಿತ್ತು. ನಿತ್ಯ ದೇಗುಲದ ಮುಂದಿರುವ ಅಶ್ವತ್ಥ ವೃಕ್ಷದ ದರ್ಶನ . ಏಳು ಸುತ್ತು ಹಾಕಿ ಕೈ ಮಗಿಯುವುದು ಅಭ್ಯಾಸವಾಗಿತ್ತು. ನಿತ್ಯ ಅನುಸರಿಸುತ್ತಿದ್ದೆವು. ನಮ್ಮಲ್ಲಿ ಏಕಾಗ್ರತೆಯನ್ನು
ಮೂಡಿಸಿ ಆಧ್ಯಾತ್ಮಿಕತೆಯನ್ನು ಹೆಚ್ಚಿಸಲು ಅದು ಸಹಕಾರಿಯಾಗಿತ್ತು. ಅಶ್ವತ್ಥ ವೃಕ್ಷದ ಪೂಜೆ ಬೆಳಗ್ಗಿನ ಸಮಯದಲ್ಲೇ ಮಾಡ ಬೇಕೆನ್ನುವುದು ಹಿಂದಿನಿಂದಲೂ ತಿಳಿದು ಬಂದಿರುವ ವಿಚಾರ.
ಅಶ್ವತ್ಥ ವೃಕ್ಷದ ಕಟ್ಟೆಯೊಳಗೆ ನಾಗದೇವರ ಕಲ್ಲಿನ ಮೂರ್ತಿ ಕಾಣುತ್ತೇವೆ. ವೃಕ್ಷದ ಬೇರಿನಲ್ಲಿ ಬ್ರಹ್ಮ , ಕಾಂಡದಲ್ಲಿ ವಿಷ್ಣು , ಎಲೆಗಳಲ್ಲಿ ಈಶ್ವರ ನೆಲೆಸಿರುವನೆಂಬುವುದು ನಮ್ಮ ನಂಬಿಕೆ. ಸತ್ಯವಾನ – ಸಾವಿತ್ರಿಯರ ಪೌರಾಣಿಕ ಕಥಾ ಭಾಗವನ್ನು ಓದುವಾಗ ನಮಗೆ ತಿಳಿದು ಬರುವ ವಿಚಾರ ಮರದ ಸನಿಹವೇ ಮಡಿದ ತನ್ನ ಪತಿ ಸತ್ಯವಾನನನ್ನು ಸಾವಿತ್ರೀ ಮತ್ತೆ ಜೀವಂತವಾಗಿ ಪಡೆದದ್ದು ಈ ವೃಕ್ಷದ ಮಡಿಲಿನಲ್ಲೇ. ವಿಶೇಷವಾದ ಶ್ರದ್ಧೆ – ಭಕ್ತಿಯ ಮೂಲಕವೇ ಅದು ಸಾಧ್ಯವಾದದ್ದು. ಶ್ರೀ ಕೃಷ್ಣ ಪರಮಾತ್ಮ ತನ್ನ ಅಂತ್ಯವನ್ನು ಪಡೆದಿರುವ ವೃಕ್ಷವದೆಂದು ಹೇಳುವರು.
ಅಶ್ವತ್ಥ ವೃಕ್ಷ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಗೌರವವನ್ನು ಪಡೆಯುವ ವೃಕ್ಷ. ಅರಳೀ ವೃಕ್ಷ ( peepal tree)ಎಂದೂ ಕರೆಯಲ್ಪಡುವ ಈ ತರುವಲ್ಲಿ ಆಮ್ಲಜನಕ ಅತ್ಯಂತ ಹೆಚ್ಚು ಉತ್ಪತ್ತಿಯಾಗುವುದು. ಅದೆಷ್ಟೋ ಕಾಯಿಲೆಗಳನ್ನು ಹಿಮ್ಮೆಟ್ಟಿಸುವ ಗುಣ ಈ ವೃಕ್ಷಕ್ಕೆ ಇದೆ. ಪವಿತ್ರ ದಾರಗಳನ್ನು ಸುತ್ತಿ ಅಶ್ವತ್ಥ ಮರವನ್ನು ಬೇಡಿಕೊಳ್ಳುವವರು , ವಿಶೇಷ ವ್ರತಗಳನ್ನು ಅಶ್ವತ್ಥ ನಾರಾಯಣನನ್ನು ಒಲಿಸಿಕೊಳ್ಳುವುದಕ್ಕಾಗಿ ನಡೆಸುವವರೂ ಇದ್ದಾರೆ.
ಧನುರ್ಮಾಸದಲ್ಲಿ ಮುಂಜಾನೆಯೇ ಹಣತೆ ದೀಪ ಅಥವಾ ಅರಳೀ ಎಲೆಯಿಂದ ತಯಾರಿಸಿದ ದೀಪಗಳನ್ನು ಇಡುವ ಸಂಪ್ರದಾಯವಿದೆ. ಆರೋಗ್ಯ ಭಾಗ್ಯ , ಕಲ್ಯಾಣ ಭಾಗ್ಯ ,ಸಂತಾನ ಭಾಗ್ಯ , ಸಂಪತ್ತಿನ ಭಾಗ್ಯ ಹೀಗೆ ವೈವಿಧ್ಯಮಯ ಕೋರಿಕೆಗಳನ್ನಿಟ್ಟು ಅಶ್ವತ್ಥ ವೃಕ್ಷವನ್ನು ಬೇಡಿಕೊಳ್ಳುವರು.
ಅಶ್ವತ್ಥ ಮರವನ್ನು ಶನಿವಾರ ದಿವಸವೇ ಪೂಜಿಸಿದರೆ ಹೆಚ್ಚು ಶ್ರೇಷ್ಠ. ಕೋರಿಕೆಗಳು ಈಡೇರುತ್ತವೆ ಎನ್ನುವರು.
ಅಶ್ವತ್ಥ ಮರವನ್ನು ಯಾವುದೇ ಕಾರಣಕ್ಕೂ ಕಡಿಯುವಂತಿಲ್ಲ. ಗೌತಮ ಬುದ್ಧನಿಗೆ ಇದೇ ವೃಕ್ಷದಡಿ ಜ್ಞಾನೋದಯವಾಯಿತೆನ್ನುವರು. ಹಿಂದಿನ ಅದೆಷ್ಟೋ ಋಷಿವರ್ಯರು ಇದೇ ದೇವತಾ ವೃಕ್ಷದಡಿ ಕುಳಿತು ಪಾಂಡಿತ್ಯ ಪಡೆದದ್ದು. ಆ ವೃಕ್ಷದ ನೆರಳಲ್ಲಿ ಒಂದಷ್ಟು ಹೊತ್ತು ಕಳೆದಾಗ ಸಿಗುವ ಆಹ್ಲಾದಕರ ಅನುಭವ ವರ್ಣನಾತೀತ. ಅಶ್ವತ್ಥ ವೃಕ್ಷ ಎಲ್ಲೆಂದರಲ್ಲಿ ಬೆಳೆಯುವುದಿಲ್ಲ. ಕೆಲವೊಮ್ಮೆ ಬಾವಿಯ ಒಳ ಆವರಣವನ್ನು ತಬ್ಬಿ ಬೆಳೆಯುವುದಿದೆ. ಅಂತಹ ಸಂದರ್ಭದಲ್ಲಿ ಒಟ್ಟಾರೆ ಕೀಳುವುದೋ ,ಎಸೆಯುವುದೋಬ ಮಾಡುವಂತಿಲ್ಲ. ಧಾರ್ಮಿಕ ಆಚರಣೆಯ ಮೂಲಕ ಬೇರೆಡೆಗೆ ನೆಡುವ ಕ್ರಮ ಅನುಸರಿಸುವರು.
ನಾನು ಈ ಲೇಖನ ಬರೆಯಲು ಕಾರಣ ಇತ್ತೀಚೆಗೆ ಅಶ್ವತ್ಥ ವೃಕ್ಷಕ್ಕೆ ನಡೆದ ಮದುವೆ.
“ಅಕ್ಕ ,ಬರೆದು ಕೊಡಿ ಅಶ್ವತ್ಥ ನಾರಾಯಣ ನ ಭಕ್ತಿ ಗೀತೆಯೊಂದನ್ನು ಎಂದು ವತ್ಸಲಾ ಕೇಳಿದಾಗ ಆಯಿತ್ತೆಂದಿದ್ದೆ. ಅರೆ ! ಅಶ್ವತ್ಥ ವೃಕ್ಷದ ಬಗ್ಗೆ ಹೌದು. ನಾರಾಯಣ ಎಂಬುದು ಸೇರಿಸಿದ್ದಾರೆ. ಶಿವನೂ ಇರುವ ,ಬ್ರಹ್ಮನೂ ಇರುವ. ಆದರೆ ನಾರಾಯಣನ ಬಗ್ಗೆ ? . ಸ್ವಲ್ಪ ಗೊಂದಲವಾದರೂ ನನಗೆ ಗೊತ್ತಿರುವಂತೆ ಬರೆದು ಕೊಟ್ಟಿದ್ದೆ.
ಅಶ್ವತ್ಥ ನಾರಾಯಣ
ಶಿರ ಬಾಗಿ ನಮಿಸುವೆವು ವರ ನೀಡಿ ಭಕ್ತರನು
ಸಂತೈಸು ಅಶ್ವತ್ಥ ನಾರಾಯಣ |
ಪರಿಹರಿಸಿ ಸಂಕಟವ ಹರುಷದೋಕುಳಿ ಹರಿಸು
ಪೂಜಿಪೆವು ಅಶ್ವತ್ಥ ನಾರಾಯಣ ||
ಏಳು ಸುತ್ತನು ಬಂದು ಸಾಲು ದೀಪವ ಹಚ್ಚಿ
ನಿಂದಿರಲು ಮನದಲ್ಲಿ ಸಂತೃಪ್ತಿಯು |
ಪತಿಯ ಪ್ರಾಣವನುಳಿಸಿ ಸಾವಿತ್ರಿಯಾ ಗೆಲುವು
ಹಿಂದಿರುವ ಗಾಥೆಯೋ ಅವ್ಯಕ್ತವು ||
ಜ್ಞಾನದಲಿ ಹೆಚ್ಚಳವು ಸಂತಾನ ಭಾಗ್ಯವು
ಆರೋಗ್ಯ ಲಗ್ನವೂ ದೇವನೊಲಿಯೆ |
ಆಮ್ಲಜನಕವ ಹೊತ್ತ ವೃಕ್ಷಗಳ ರಾಜನಿಗೆ
ಮನಸೋತ ಭಗವಂತ ಅವನಲ್ಲವೇ ||
ಹರಿ ಹರರು ಮಾತ್ರವೇ ಬ್ರಹ್ಮನೂ ನೆಲೆಸಿರುವ
ಅಶ್ವತ್ಥ ವೃಕ್ಷವೇ ಶರಣು ಶರಣು |
ದೇಗುಲದ ಬಳಿಯಲ್ಲಿ ನೆಲೆಯ ಬಯಸುವ ವೃಕ್ಷ
ವಂದಿಸುವೆ ಅಶ್ವತ್ಥ ನಾರಾಯಣ ||
ಆಶ್ರಯವ ಪಡೆದಂಥ ಹಕ್ಕಿಗಳ ಚಿಲಿಪಿಲಿಯು
ಹಾಡಿ ಹೊಗಳುತಲಿಹುದು ನಾರಾಯಣ |
ನಿನ್ನ ಕೃಪೆಯಲಿ ನಾವು ನಗುನಗುತ ಬಾಳುವೆವು
ಶರಣೆಂದೆ ಅಶ್ವತ್ಥ ನಾರಾಯಣ ||ಶೋಹ
ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಸುಶ್ರಾವ್ಯವಾಗಿ ಹಾಡಿದ್ದರು ವತ್ಸಲಾದ್ವಯರು. ಖುಷಿಯಾಯಿತು. ಕಳಿಸಿದ್ದ ಚಿತ್ರದಲ್ಲಿ ಸಿಂಗರಿಸಲ್ಪಟ್ಟ ವರವಧೂ. ಅಪರೂಪಕ್ಕೊಮ್ಮೆ ನಡೆಯುವ ಮದುವೆ.
ಇಲ್ಲಿ ವರ ಅಶ್ವತ್ಥ – ವಧೂ ಕಹಿ ಬೇವು. ಎರಡೂ ವೃಕ್ಷಗಳು ಆರೋಗ್ಯದ ವಿಷಯದಲ್ಲಿ ಬಹಳ ಪ್ರಮುಖವಾಗಿದೆ. ಔಷಧೀಯ ಗುಣಗಳು ಒಂದೇ ಎರಡೇ.ಅದ್ಭುತ.
ಒಂದು ಸಂಸ್ಕಾರವುಳ್ಳ ಕುಟುಂಬದಲ್ಲಿ ಯಾವುದೇ ಕ್ರಮಕ್ಕೆ ಭಂಗ ಬರದಂತೆ ನಡೆಯುವಂತಹ ಮದುವೆ. ವಧೂವಿನ ಕಡೆಯವರು , ವರನ ಕಡೆಯುವರು. ಅರಿಶಿನ ಶಾಸ್ತ್ರ. ಬಳೆಯ ಶಾಸ್ತ್ರ , ನಾಂದಿ ಶಾಸ್ತ್ರ , ಹೋಮ ವಾದ್ಯಗೋಷ್ಠಿ ,ಇತ್ಯಾದಿ ಇತ್ಯಾದಿ. ಜರತಾರಿ ಸೀರೆ , ಶಾಸ್ತ್ರ ಸಂಪ್ರದಾಯ ಯಾವುದೂ ತಪ್ಪಿಸಿಲ್ಲ. ಒಂದು ಬ್ರಾಹ್ಮಣ ಕುಟುಂಬದಲ್ಲಿ ನಡೆಯುವ ಪ್ರತಿಯೊಂದು ಆಚರಣೆ ಇದೆ. ನಮ್ಮ ಆಚರಣೆಯೂ ಬ್ರಾಹ್ಮಣರ ಆಚರಣೆಯೂ ಒಂದೇ ತಾನೇ. ಒಂದು ಸಾವಿರ ಎಲೆ ಅಶ್ವತ್ಥ ವೃಕ್ಷದಲ್ಲಿ ಹುಟ್ಟಿಕೊಂಡಾಗಲೇ ಮದುವೆ ಮಾಡ ಬೇಕೆಂಬ ನಂಬಿಕೆಯಿದ್ದರೂ ಅವರವರ ಅನುಕೂಲಕ್ಕೆ ತಕ್ಕಂತೆ ಈ ಆಚರಣೆಯನ್ನು ನಡೆಸುವರು.
ಮೇಲಿನ ಚಿತ್ರದಲ್ಲಿ ಇರುವುದು ಹೆಮ್ಮರ. ಈ ಮದುವೆಯಿಂದ ಸರ್ವರಿಗೂ ಶ್ರೇಯಸ್ಸು ನಿಶ್ಚಿತ.
ಕರಾವಳಿಯಲ್ಲಿ ಹೆಚ್ಚಾಗಿ ಈ ಸಂಪ್ರದಾಯ ಕಂಡು ಬರುವುದು. ಅಶ್ವತ್ಥ ನಾರಾಯಣನ ಮದುವೆ ಹೇಗೆ ಎಂದರೆ ಇಲ್ಲಿ ನಡೆಯುವುದು
ವಿಷ್ಣು ಮತ್ತು ಲಕ್ಷ್ಮಿಯ ಮದುವೆ. ಅಶ್ವತ್ಥ ನಾರಾಯಣ. ಕಹಿ ಬೇವಿನ ವೃಕ್ಷ ಲಕ್ಷ್ಮೀ. ವಧೂ ವರರ ಶೃಂಗಾರ ಅದ್ಭುತ.
ಮದುವೆಯ ಊಟ ಅದ್ದೂರಿ.
ಅಂದ ಹಾಗೆ ಅಶ್ವತ್ಥ ವೃಕ್ಷಕ್ಕೆ ಉಪನಯನವನ್ನೂ ಮಾಡುವರು. ಒಟ್ಟಾರೆ ಸುರರು ನರರಿಗಿಂತ ಭಿನ್ನವಲ್ಲ ಮದುವೆಯ ಕ್ರಮ.
ಶಿರ ಬಾಗಿ ನಮಿಸುವೆ ನಾರಾಯಣ – ಅಶ್ವತ್ಥ ನಾರಾಯಣ
ಶೋಭಾ ಹರಿಪ್ರಸಾದ ಶೆಟ್ಟಿಗಾರ ಉಡುಪಿ
ಚಿತ್ರ ಕೃಪೆ : ವತ್ಸಲಾ
